ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ನೀರಿಕ್ಷಕರು ಗುರುವಾರ ವಶಪಡಿಸಿಕೊಂಡಿದ್ದು, ಓರ್ವ ಪರಾರಿಯಾಗಿದ್ದಾನೆ. ಖಚಿತ ಮಾಹಿತಿ ಆಧರಿಸಿ ಕುಂದಾಪುರ ನಗರ ಠಾಣಾ ಪೋಲೀಸರು ಹಾಗೂ ಆಹಾರ ನೀರಿಕ್ಷಕ ಎಚ್. ಎಸ್. ಸುರೇಶ್ ಅವರು ದಾಳಿ ನಡೆಸಿದ್ದು, ತ್ರಾಸಿ ಅಣ್ಣಪ್ಪಯ್ಯ ಸಭಾಭವನದ ಬಳಿ ಹೊಸ ಇಕೋ ವಾಹನದಲ್ಲಿ ಪಡಿತರ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದೆ. ವಾಹನ ಚಾಲಕ ಪರಾರಿಯಾಗಿದ್ದು, ವಾಹನವು ಮೊಹಮ್ಮದ್ ಸಬಿಲ್ ಎಂಬಾತನಿಗೆ ಸೇರಿದ್ದು ತಿಳಿದು ಬಂದಿದೆ. ವಾಹನದಲ್ಲಿ 24 ಅಕ್ಕಿ ತುಂಬಿದ ಚೀಲಗಳಿದ್ದು ಒಟ್ಟು 15,641 ರೂ. ಮೌಲ್ಯದ 1,043 ಕೆಜಿ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುದುಚೆರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಶುಕ್ರವಾರ ಬೆಳಗ್ಗೆ ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ರಾತ್ರಿ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿ, ದೇವಸ್ಥಾನ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಗ್ಗೆ 5 ಗಂಟೆಗೆ ಮೂಕಾಂಬಿಕಾ ದೇವಿ ದರ್ಶನ ಪಡೆದ ವಿಶೇಷ ಪೂಜೆ ಸಲ್ಲಿಸಿದ ನಂತರ ಚಂಡಿಕಾ ಹೋಮ ನೆರವೇರಿಸಿ, ಪೂರ್ಣಾಹುತಿ ಸಮರ್ಪಿಸಿದರು. ಸಿಎಂ ನಾರಾಯಾಣ ಸ್ವಾಮಿ ಅವರ ದೇವಸ್ಥಾನಕ್ಕೆ ಕುಂದಾಪುರ ಎಸಿ ಕೆ.ರಾಜು ಅವರು ಬರಮಾಡಿಕೊಂಡಿದ್ದು, ದೇವಸ್ಥಾನ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತುಗೋಳಿ ದೇವಾಸ್ಥಾನ ಪರವಾಗಿ ಗೌರವಿಸಿದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕ್ಷೇತ್ರದ ಪರವಾಗಿ ಸನ್ಮಾನಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರವಾರ ಬೆಂಗಳೂರು ರೈಲು ಸೆ.20ರಿಂದ ಯಶವಂತಪುರ ಬದಲು ಮೆಜೆಸ್ಟಿಕ್ ಮೂಲಕ ಪ್ರಯಾಣ ಆರಂಭಿಸಲಿದೆ. ಇದರಿಂದಾಗಿ ಅರ್ಧ ಗಂಟೆ ಮೊದಲು ತಲುಪಲಿದೆ. ಸಂಜೆ 6:20ಕ್ಕೆ ಮೆಜೆಸ್ಟಿಕ್ ಬಿಡುವ ಈ ರೈಲು ಮೊದಲಿನ ಸಮಯಕ್ಕೇ ಕುಂದಾಪುರ ತಲುಪಲಿದೆ. 1:20 ಸುಬ್ರಹ್ಮಣ್ಯ, 1:49 ಕಾಣಿಯೂರು, 2:08 ಪುತ್ತೂರು, 2:39 ಬಂಟ್ವಾಳ, 3:57 ಸುರತ್ಕಲ್, 4:12 ಮುಲ್ಕಿ, 4:20 ಉಡುಪಿ, 4:42 ಬಾರ್ಕೂರು, 4:54 ಕುಂದಾಪುರ, 5:18 ಬೈಂದೂರು, 8:25ಕ್ಕೆ ಕಾರವಾರ ತಲುಪಲಿದೆ. ರಾತ್ರಿ 8:05ಕ್ಕೆ ಬೈಂದೂರು, 8:30ಕ್ಕೆ ಕುಂದಾಪುರ ಬಿಡುವ ಈ ರೈಲು, ಬೆಳಗ್ಗೆ 7:15ಕ್ಕೆ ಯಶವಂತಪುರ ಮತ್ತು 8ಕ್ಕೆ ಮೆಜೆಸ್ಟಿಕ್ ತಲುಪಲಿದೆ. ಕುಂದಾಪುರ – ಬೆಂಗಳೂರು ಪ್ರಯಾಣದಲ್ಲಿ ಪ್ರಯಾಣಿಕರಿಗೆ ಅರ್ದ ಗಂಟೆ ಕಡಿತವಾಗಿದೆ. ಕಾರವಾರ ಸಂಸದ ಅನಂತ್ ಕುಮಾರ್ ಹೆಗಡೆ ಮೂಲಕ ರೈಲ್ವೆ ಯಾತ್ರಿಕರ ಸಂಘ ನಡೆಸಿದ ಪ್ರಯತ್ನ ಯಶಸ್ವಿಯಾಗಿದ್ದು, ಯಶವಂತಪುರ ಮುಂಚಿನ 8 ಗಂಟೆ ಬದಲಿಗೆ 7:25ಕ್ಕೆ ತಲುಪಿ ಮೆಜೆಸ್ಟಿಕ್ 8ಕ್ಕೆ ತಲುಪುತ್ತದೆ. ಬೆಂಗಳೂರಿಂದ ಪಡೀಲ್ವರೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಗೊಳ್ಳಿ ದೇವಸ್ಥಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಖಾರ್ವಿಕೇರಿಯ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಂಗೊಳ್ಳಿ ಖಾರ್ವಿಕೇರಿಯ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಮಹಾಲಯ ಅಮವಾಸ್ಯೆ ಪ್ರಯುಕ್ತ ಭಕ್ತರು ಸೇರಿದ್ದರು. ಈ ಸಂದರ್ಭ ಪೆಟ್ರೋಲ್ ಕ್ಯಾನ್ ಹಿಡಿದು ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ನೋಡ ನೋಡುತ್ತಿದ್ದಂತೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ಕಾಲು ದೀಪದಲ್ಲಿ ಉರಿಯುತ್ತಿದ್ದ ಬೆಂಕಿ ತಗುಲಿದ್ದು, ಕ್ಷಣದಲ್ಲಿ ಬೆಂಕಿ ರಾಘವೇಂದ್ರ ಖಾರ್ವಿಯನ್ನು ಆವರಿಸಿಕೊಂಡಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ರಾಘವೇಂದ್ರ ಖಾರ್ವಿಯನ್ನು ರಕ್ಷಿಸಲು ತೆರಳಿದವರಿಗೂ ಬೆಂಕಿಯ ತೀವ್ರತೆ ತಗುಲಿದ್ದು, ಸುಟ್ಟ ಗಾಯಗಳಾಗಿತ್ತು. ಬೆಂಕಿಯ ತೀವ್ರತೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ರಾಘವೇಂದ್ರ ಖಾರ್ವಿ ಹಾಗೂ ಬೆಂಕಿ ನಂದಿಸಲು ಪ್ರಯತ್ನಿಸಿ ಬೆಂಕಿಯ ತೀವ್ರತೆಯಿಂದ ಗಾಯಗೊಂಡವರನ್ನು ತಕ್ಷಣ ಗಂಗೊಳ್ಳಿಯ ಆಪತ್ಭಾಂದವ ಆಂಬುಲೆನ್ಸ್ನ ಇಬ್ರಾಹಿಂ ಹಾಗೂ ತಂಡ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರು. ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಅವರ ಮೈಮೇಲೆ ದೇವರು ಬರುತ್ತಿದ್ದರೂ ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಕುರಿತ ಲಿಖಿತ ಪರೀಕ್ಷೆಯು, ಸೆಪ್ಟಂಬರ್ 20 ರಂದು ಜಿಲ್ಲೆಯ, ಪೂರ್ಣಪ್ರಜ್ಞ ಯುನಿವರ್ಸಿಟಿ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಪ್ರೀ-ಯುನಿವರ್ಸಿಟಿ ಕಾಲೇಜು ಉಡುಪಿ, ಮಹಾತ್ಮ ಗಾಂಧೀ ಮೆಮೋರಿಯಲ್ ಪಿಯು ಕಾಲೇಜು ಉಡುಪಿ(ಎಂ.ಜಿ.ಎಂ), ಮಹಾತ್ಮ ಗಾಂಧೀ ಮೆಮೋರಿಯಲ್ ಯುನಿವರ್ಸಿಟಿ ಕಾಲೇಜು ಉಡುಪಿ(ಎಂ.ಜಿ.ಎಂ), ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ, ವಿದ್ಯೋದಯ ಪ್ರೀ- ಯುನಿವರ್ಸಿಟಿ ಕಾಲೇಜು ವಾದಿರಾಜ ರೋಡ್ ಉಡುಪಿ, ಸರ್ಕಾರಿ ಪ್ರೀ- ಯುನಿವರ್ಸಿಟಿ ಕಾಲೇಜು ಬೋರ್ಡ್ ಹೈಸ್ಕೂಲ್ ಉಡುಪಿ, ಮೌಂಟ್ ರೋಸರಿ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಕಲ್ಯಾಣಪುರ ಸಂತೆಕಟ್ಟೆ ಉಡುಪಿ, ಕೆ.ಎಂ.ಸಿ ಇಂಟರ್ಯಾಕ್ಟ್ ಹಾಲ್ ನಿಯರ್ ಅನಾಟಮಿ ಹಾಲ್ ಮಣಿಪಾಲ, ಈ 9 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ , ಪ್ರವೇಶ ಪತ್ರ, ಗುರುತಿನ ಚೀಟಿ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ನೀರಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿ ಪಂಚಾಯತ್ ವ್ಯಾಪ್ತಿಯ ಮಲ್ಲಾರಿ ಎಂಬಲ್ಲಿ ತೀರಾ ಅಗತ್ಯವಿರುವ ಬಡ ಕುಟುಂಬಕ್ಕೆ ಸಂಪೂರ್ಣ ನವೀಕರಿಸಿ ವಾಸಕ್ಕೆ ಯೋಗ್ಯವಾಗಿ ನಿರ್ಮಿಸಿದ ಮನೆ ’ಆಸರೆ’ಯನ್ನು ರೋಟರಿ ಕ್ಲಬ್ ಕುಂದಾಪುರ ತನ್ನ ವಜ್ರಮಹೋತ್ಸವ ವರ್ಷದ ಸುಸಂದರ್ಭದಲ್ಲಿ ಕೊಡುಗೆಯಾಗಿ ನೀಡಿ ಅವರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ ಸಾರ್ಥಕತೆಯನ್ನು ಪಡೆದುಕೊಂಡಿದೆ. ರೋಟರಿ ಕುಂದಾಪುರದ ಈ ಸೇವೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ೨೦೧೯-೨೦ನೇ ಸಾಲಿನಲ್ಲಿ ರೋಟರಿ ಕುಂದಾಪುರ ಅನೇಕ ಸೇವಾ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ, ಸಸಿ ನೆಡುವಿಕೆ, ಪರಿಸರ ಕಾಳಜಿ, ಆರೋಗ್ಯ ಮಾಹಿತಿ, ಶುದ್ದ ಕುಡಿಯುವ ನೀರಿನ ಘಟಕ, ಇಂಟರ್ರ್ಯಾಕ್ಟ್ ಉದ್ಘಾಟನೆ, ಅಶಕ್ತರಿಗೆ ಸಹಾಯಧನ ಹೀಗೆ ಅನೇಕ ಸೇವಾಕಾರ್ಯವನ್ನು ಮಾಡಿದೆ. ಹಿಂದಿನ ಸಾಲಿನ ಉತ್ಸಾಹಿ ಅಧ್ಯಕ್ಷರಾದ ಡಾ. ರಾಜರಾಮ್ ಶೆಟ್ಟಿ ಅವರು ಇಡೀ ರಾಷ್ಟ್ರವೇ ಕೊರೋನಾ ಎಂಬ ಮಹಾಮಾರಿಯಿಂದ ತತ್ತರಿಸಿ ಮಲಗಿಕೊಂಡಿದ್ದಾಗ ಹಟ್ಟಿಯಂಗಡಿ ಸಮೀಪದ ಮಲ್ಲಾರಿಯಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದ ಮನೆಯನ್ನು ಕಂಡು ಅವರ ಪರಿಸ್ಥಿತಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಹಾಗೂ ಗ್ರಾಮ ಪಂಚಾಯತ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ಜರಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್., ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಲ್ಲಿನ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರು ಸೇವಿಸಬೇಕಾದ ಆಹಾರ ಮತ್ತು ಪೌಷ್ಟಿಕಾಂಶಗಳ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಲು ಸರಕಾರ ಕ್ರಮಕೈಗೊಂಡಿದ್ದು, ಅವರಲ್ಲಿನ ಅಪೌಷ್ಠಿಕತೆಯನ್ನು ಕಡಿಮೆ ಮಾಡಿ ಅವರ ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಿದೆ ಎಂದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಜಿಲ್ಲೆ 3182 ವತಿಯಿಂದ ಕೋವಿಡ್ ವಿಪತ್ತಿನ ಸಹಾಯ ನಿಧಿಯಡಿ ಕೊಡುಗೆಯಾಗಿ ನೀಡಿದ ಸುಮಾರು 1.75 ಲಕ್ಷ ರೂ. ಮೌಲ್ಯದ ಪಿಪಿಇ ಕಿಟ್ ರೇಸ್ಪಿರೇಟರ್’ಗಳನ್ನು ಬುಧವಾರ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಎಚ್. ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ ನಿಕಟಪೂರ್ವ ಗವರ್ನರ್ ಬಿ.ಎನ್. ರಮೇಶ್, ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ, ರೋಟರಿ ವಲಯ ೧ರ ವಿವಿಧ ಕ್ಲಬ್ನ ಡಾ. ರಾಜಾರಾಮ್ ಶೆಟ್ಟಿ, ಶಶಿಧರ ಶೆಟ್ಟಿ, ದೇವರಾಜ್ ಪಿ., ಭಾಸ್ಕರ್ ಕೆ., ರಾಜು ಮೂಡ್ಲಕಟ್ಟೆ, ಶಿವಾನಂದ ಪೂಜಾರಿ, ಪ್ರಕಾಶ್ ಭಟ್, ಉದಯ ಕನ್ನಂತ, ವಲಯ ಸೇನಾನಿಗಳಾದ ಪ್ರಕಾಶ್ಚಂದ್ರ ಶೆಟ್ಟಿ, ಬಿ.ಎಂ. ಚಂದ್ರಶೇಖರ, ನಾರಾಯಣ ನಾಯ್ಕ್, ಜಿಲ್ಲಾ ತರಭೇತುದಾರ ಕೃಷ್ಣ ಕಾಂಚನ್, ವಲಯ ಕಾರ್ಯದರ್ಶಿ ಪ್ರದೀಪ ವಾಜ್ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗ್ರಾಮವಿಕಾಸ ಸಮಿತಿ ಗಂಗೊಳ್ಳಿ ಮತ್ತು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಇವರ ಆಶ್ರಯದಲ್ಲಿ ಗಂಗೊಳ್ಳಿಯಲ್ಲಿ ಆಯೋಜಿಸಲಾಗಿದ್ದ ಮೀನುಗಾರಿಕೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿದ್ದ ಗ್ರಾಮವಿಕಾಸ ಸಮಿತಿ ಉಡುಪಿ ಜಿಲ್ಲೆಯ ಪ್ರಮುಖ ಪ್ರಮೋದ್ ಶೆಟ್ಟಿ ಮಾತನಾಡಿ, ಆತ್ಮನಿರ್ಭರ್ ಭಾರತ್ ಆಶಯದಂತೆ ಕೋವಿಡ್-19 ನಿಂದಾಗಿ ಪರ ಊರುಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ಬಂದ ಉದ್ಯೋಗಾಕಾಂಕ್ಷಿಗಳಿಗಾಗಿ ಮತ್ತು ಆಸಕ್ತರಿಗೆ ಸ್ವ ಉದ್ಯೋಗದಲ್ಲಿ ತರಬೇತಿ ನೀಡಿ ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಮೀನುಗಾರರಿಗೆ ಒಳನಾಡು ಹಾಗೂ ಕರಾವಳಿ ಮೀನುಗಾರಿಕೆ ಮತ್ತು ಮತ್ಸ್ಯೋದ್ಯಮದಲ್ಲಿ ಅವಕಾಶಗಳ ಬಗ್ಗೆ ಇಲಾಖಾ ಅಧಿಕಾರಿಗಳಿಂದ ಮತ್ತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು. ಗಂಗೊಳ್ಳಿ ದಾಕುಹಿತ್ಲು ಶ್ರೀ ರಾಮ ಮಂದಿರ ಅಧ್ಯಕ್ಷ ಜಗನ್ನಾಥ ಪಟೇಲ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ತಾಲೂಕು…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕಲಿಕಾ ಕೇಂದ್ರವಾದ ಎಂಜಿಎo ಕಾಲೇಜಿನಲ್ಲಿ ಸೆಪ್ಟಂಬರ್ 18 ರಿಂದ ಬಿ.ಎ/ಬಿ.ಕಾಂ ವಾರ್ಷಿಕ ಪರೀಕ್ಷೆಗಳು ಮತ್ತು ಅಕ್ಟೋಬರ್ 1 ರಿಂದ ಎಂ.ಎ/ಎo.ಕಾo ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಸಂಬoಧ ವೇಳಾಪಟ್ಟಿಯನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ www.ksoumysuru.ac.in ಪ್ರಕಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
