ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತನ್ನ ತೋಟಕ್ಕೆ ಹಸುವೊಂದು ಮೇಯಲು ಬಂತೆಂಬ ಕಾರಣಕ್ಕೆ ಅದನ್ನು ಸಜೀವವಾಗಿ ಹೊಂಡದಲ್ಲಿ ಹೂತು ಕೊಂದುಹಾಕಿದ ಅಮಾನುಷ ಕೃತ್ಯವೊಂದು ತಾಲೂಕಿನ ಹಕ್ಲಾಡಿ ಗ್ರಾಪಂ ವ್ಯಾಪ್ತಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ ಗಂಗಪ್ಪ ಎಂಬುವವನನ್ನು ಬಂಧಿಸಲಾಗಿದ್ದು, ಇತರರು ತಲೆ ಮರೆಸಿಕೊಂಡಿದ್ದಾರೆ.
ಕುಂದಾಬಾರಂದಾಡಿಯ ನೆಂಚಾರು ಮನೆ ಲಕ್ಷ್ಮೀ ಪೂಜಾರ್ತಿ ಎಂಬುವವರಿಗೆ ಸೇರಿದ ದನವನ್ನು ಮೇಯಲು ಹೊರಕ್ಕೆ ಬಿಟ್ಟಾಗ ಸಮೀಪದ ಪರಮೇಶ್ವರ ಗಾಣಿಗ ಎಂಬುವವರ ತೋಟಕ್ಕೆ ನುಗ್ಗುತ್ತಿತ್ತು ಎನ್ನಲಾಗಿದೆ. ಆದರೆ ನಿನ್ನೆ ಸಂಜೆ ದನವು ಮನೆಗೆ ಹಿಂತಿರುಗದ್ದನ್ನು ನೋಡಿ ಲಕ್ಷ್ಮೀ ಪೂಜಾರ್ತಿ ಅವರ ತೋಟದಲ್ಲಿಯೇ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪರಮೇಶ್ವರ ಅವರ ಜಾಗದಲ್ಲಿದ್ದ ಕೊಟ್ಟಿಗೆ ಸಮೀಪ ಮಣ್ಣು ಮುಚ್ಚಿದ ಹಾಗಿರುವುದನ್ನು ನೋಡಿ, ಗುದ್ದಲಿಯಿಂದ ಅಗೆದಾಗ ಹಸುವಿನ ಮುಖ ಕಂಡುಬಂದಿತ್ತು. ಆಕೆ ಕೂಗಿಕೊಳ್ಳುತ್ತಿದ್ದಂತೆ ಆಸುಪಾಸಿನ ಜನ ಒಟ್ಟುಸೇರಿ ಮಣ್ಣು ತೆಗೆದು ದನವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲಿಯವರೆಗೂ ಜೀವಂತವಾಗಿದ್ದ ಹಸು, ಸ್ವಲ್ಪ ಹೊತ್ತಿನ ಬಳಿಕ ಅಸುನೀಗಿದೆ.
ತೋಟದ ಮಾಲಿಕನ ಈ ಅಮಾನವೀಯ ಕೃತ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿರುವುದಲ್ಲದೇ ಓರ್ವ ಕೆಲಸಗಾರನ ಬಂಧನವೂ ಆಗಿದೆ. ಜೀವನಾಧಾರವಾಗಿದ್ದ ಹಸುವನ್ನು ಕಳೆದುಕೊಂಡು ಕಂಗೆಟ್ಟಿದ್ದ ಮಹಿಳೆಗೆ ಸ್ಥಳೀಯರು ಬೇರೊಂದು ಹಸುವನ್ನು ಖರೀದಿಸಲು ಧನಸಹಾಯ ಮಾಡಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/