ಕುಂದಾಪುರ: ದೇಶದಲ್ಲಿ ಮೋದಿ ನೇತ್ರತ್ವದ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಂiiನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದು ಕೇಂದ್ರ ಸರಕಾರ ಅನುದಾನ ನೇರವಾಗಿ ಗ್ರಾ.ಪಂಗಳಿಗೆ ತಲುಪಿಸಲು ಹೆಚ್ಚಿನ ಒತ್ತು ನೀಡಿ ಪಂಚಾಯತ್ ಗೆ ಶಕ್ತಿ ತುಂಬುತ್ತಿದೆ. ದೇಶದಲ್ಲಿ ಅಪೂರ್ಣವಾಗಿ ಉಳಿದಿರುವ ರೈಲ್ವೆ, ನೀರಾವರಿ ಹಾಗೂ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತಂದಿದ್ದರೆ. ಕಾಂಗ್ರೆಸ್ ಅದು ರೈತ ವಿರೋಧಿ ಎಂದು ಹುಯಿಲೆಬ್ಬಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ಎಸ್ ಯಡಿಯೂರಪ್ಪ ಆರೋಪಿಸಿದರು.
ಇಲ್ಲಿಗೆ ಸಮೀಪದ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕ್ಷೇತ್ರ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದಿನ ಯುಪಿಐ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿದ್ದ ಹಣಕಾಸು ವ್ಯವಸ್ಥೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತ್ರತ್ವದಲ್ಲಿ ಸರಿದಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ದಿನಗಳಲ್ಲಿ ನೀಡಿದ್ದ ಜನಪರ ಕಾರ್ಯಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ ಕಡೆಗಣಿಸುತ್ತಿದೆ. ಕೇಂದ್ರ ಸರಕಾರ ನೀಡುತ್ತಿರುವ ಪಡಿತರಗಳನ್ನು ವಿತರಣೆ ಮಾಡುವ ಕೆಲಸವನ್ನಷ್ಟೆ ಮಾಡುತ್ತಿರುವ ರಾಜ್ಯ ಸರ್ಕಾರ, ತಾನೆ ಉಚಿತವಾಗಿ ಪಡಿತರ ನೀಡುತ್ತಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಡುಪಿ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅವಶ್ಯಕತೆಗೆ ಅನುಗುಣವಾಗಿ ಅನುದಾನದ ಹಂಚಿಕೆ ಮಾಡಲಾಗಿತ್ತಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳನ್ನು ಕಡೆಗಣಿಸಿದೆ. ತಮ್ಮದು ಅಹಿಂದ ಸರ್ಕಾರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಎಸ್ಸಿ/ಎಸ್ಟಿ ಅಭಿವೃದ್ದಿಗಾಗಿ ಮೀಸಲಿಟ್ಟ 15,834 ಕೋಟಿ ಅನುದಾನಲ್ಲಿ ಕೇವಲ 10,979 ಕೋಟಿ ಹಣವನ್ನು ಮಾತ್ರ ವ್ಯಯ ಮಾಡಿದೆ ಎಂದು ವ್ಯಂಗ್ಯವಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತ ಶೈಲಿ ಹಾಗೂ ಅಭಿವೃದ್ದಿಯನ್ನು ತುಲನೆ ಮಾಡಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೆಳ್ವೆ ವಸಂತಕುಮಾರ ಶೆಟ್ಟಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಬೈಂದೂರು ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ಕುಮಾರ ಕೊಡ್ಗಿ, ಕಾರ್ಯದರ್ಶಿ ನವೀನ್ಕುಮಾರ ಶೆಟ್ಟಿ ಕುತ್ಯಾರು, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಕಾಸ್ ಪುತ್ತೂರು, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಮಹೇಶ್ ಪೂಜಾರಿ ಕೋಡಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಬಿಲ್ಲವ ಕೋಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ ಶ್ರೀಯಾನ್, ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ, ಪಕ್ಷದ ಪ್ರಮುಖರಾದ ಪುಂಡಲೀಕ ನಾಯಕ್, ಸಂಜೀವ ದೇವಾಡಿಗ ವೇದಿಕೆಯಲ್ಲಿದ್ದರು.
ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಕಿಶೋರ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ ಸ್ವಾಗತಿಸಿದರು, ಮಾಲಿನಿ ಸತೀಶ್ ನಿರೂಪಿಸಿದರು, ರವೀಂದ್ರ ದೊಡ್ಮನೆ ವಂದಿಸಿದರು.