ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಅಂಗನವಾಡಿ ಶಿಕ್ಷಕರಾಗಿ ಹಾಗೂ ಸಹಾಯಕರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈಗಾಗಲೇ ನಿವೃತ್ತರಾದವರು ತಮ್ಮ ಸೇವಾವಧಿಯಲ್ಲಿ ಅತೀ ಕಡಿಮೆ ಗೌರವ ಧನದಲ್ಲಿ ಸೇವೆ ಸಲ್ಲಿಸಿ, ಯಾವುದೇ ಇತರೆ ಸೌಲಭ್ಯಗಳಿಲ್ಲದೇ ಈಗಾಗಲೇ ನಿವೃತ್ತಿ ಗೊಂಡಿರುವುದರಿಂದ ಅಂತವರಿಗೆ ಸೂಕ್ತ ಗ್ರಾಚುವಿಟಿ ಸೌಲಭ್ಯ ಒದಗಿಸಿ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಸದನದಲ್ಲಿ ಒತ್ತಾಯಿಸಿದ್ದಾರೆ.
ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದಿನಾಂಕ 04-02-2023ರ ಸರ್ಕಾರದ ಆದೇಶದಂತೆ 2023- 24ನೇ ಸಾಲಿನಿಂದ ನಿವೃತ್ತಿಯಾದ 2,358 ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ 2097 ಅಂಗನವಾಡಿ ಸಹಾಯಕರಿಗೆ ಗ್ರಾಚುವಿಟಿ ಮೊತ್ತ ಮಂಜೂರು ಮಾಡಲಾಗಿದೆ.
2011ನೇ ಸಾಲಿನಿಂದ 2022 -23ನೇ ಸಾಲಿನವರೆಗೂ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚುವಿಟಿ ಮೊತ್ತ ಪಾವತಿಸಲು ಆರ್ಥಿಕ ಇಲಾಖೆ ಅಭಿಪ್ರಾಯದ ಮೇರೆಗೆ ಕೇಂದ್ರ ಸರ್ಕಾರಕ್ಕೆ ಅನುದಾನ ಕೋರಿ ದಿನಾಂಕ: 06- 12 -2025ರಂದು ಪತ್ರಿಸಲಾಗಿದ್ದು ಅನುದಾನ ಬಿಡುಗಡೆಯಾದ ನಂತರ ಗ್ರಾಚುವಿಟಿ ಸೌಲಭ್ಯ ನೀಡಲು ಸರಕಾರದಿಂದ ಕ್ರಮ ವಹಿಸಲಾಗುವುದು ಎಂದಿದ್ದಾರೆ.










