ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಸೇವೆಗೆ ಹೆಸರು ವಾಸಿಯಾಗಿದೆ. ಗಂಗೊಳ್ಳಿ ರೋಟರಿ ಸಂಸ್ಥೆಯು ಗಂಗೊಳ್ಳಿ ಪರಿಸರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಇನ್ನಷ್ಟು ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರೋಟರಿಯ ಸೇವೆಗಳು ತಲುಪುವಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ರೋಟರಿ ಜಿಲ್ಲೆ 3182ರ ಮಾಜಿ ಗವರ್ನರ್ ಬಿ.ಸಿ. ಗೀತಾ ಹೇಳಿದರು.

ಅವರು ಭಾನುವಾರ ತ್ರಾಸಿಯ ಪ್ರೆಸ್ಟೀಜ್ ಪ್ಯಾಲೇಸ್ ಆಡಿಟೋರಿಯಮ್ನಲ್ಲಿ ನಡೆದ ರೋಟರಿ ಕ್ಲಬ್ ಗಂಗೊಳ್ಳಿ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆವೇರಿಸಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಮಾಲಾಶ್ರೀ ಖಾರ್ವಿ, ನೂತನ ಕಾರ್ಯದರ್ಶಿಯಾಗಿ ಗಿರೀಶ್ ಖಾರ್ವಿ ಮತ್ತು ಇನ್ನಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸಹಾಯಕ ಗವರ್ನರ್ ಜೆ. ಶ್ರೀನಾಥ ರಾವ್ ಮತ್ತು ಜೋನಲ್ ಲೆಫ್ಟಿನೆಂಟ್ ಚಂದ್ರಕಲಾ ತಾಂಡೇಲ ಶುಭ ಹಾರೈಸಿದರು.
ಈ ಸಂದರ್ಭ ಕಳೆದ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ.ವಿ. ಪದವಿಪೂರ್ವ ಕಾಲೇಜಿನ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಕೊಡುಗೆಯನ್ನು ನೀಡಲಾಯಿತು. ಪ್ಲಾಸ್ಟಿಕ್ ಮುಕ್ತ ಪರಿಸರ ಯೋಜನೆಯಡಿ ಗಂಗೊಳ್ಳಿಯ ಶ್ರೀ ಶನೀಶ್ವರ ದೇವಸ್ಥಾನಕ್ಕೆ ರೋಟರಿ ಸದಸ್ಯೆ ಉಷಾ ದಿನಕರ ಅವರು ಬಟ್ಟೆ ಕೈಚೀಲಗಳನ್ನು ಉಚಿತವಾಗಿ ವಿತರಿಸಿದರು.
ನಿಕಟಪೂರ್ವ ಅಧ್ಯಕ್ಷ ಕೃಷ್ಣ ಪೂಜಾರಿ, ಕಾರ್ಯದರ್ಶಿ ರಾಮನಾಥ ಚಿತ್ತಾಲ್ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣ ಪೂಜಾರಿ ಸ್ವಾಗತಿಸಿ, ಗಿರೀಶ ಖಾರ್ವಿ ವಂದಿಸಿದರು.
















