ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಇನ್ನೆಂದೂ ಅ ಮನೆಯಂಗಳದಲ್ಲಿ ಮಕ್ಕಳ ಕಲರವ ಕೇಳಿಸಲಾರದು. ಆ ಮಕ್ಕಳೇ ಕಟ್ಟಿದ ಜೋಕಾಲಿ ಜೀಕಲಾರದು, ಅಲ್ಲಲ್ಲಿ ಅನಾಥವಾಗಿ ಬಿದ್ದಿರುವ ಆಟಿಕೆಗಳು ಸದ್ದು ಮಾಡಲಾರವು. ಸದಾ ಕಾಲ ಮಕ್ಕಳನ್ನು ಕರೆಯುತ್ತಿದ್ದ ತಂದೆಯ ಸ್ವರವೂ ಕೇಳಲಾರದು. ಹಕ್ಕಿಗಳು ಚಿಲಿಪಿಲಿ ಗುಟ್ಟಲಾರವು, ಅಬ್ಬಾ ವಿಧಿಯೇ ನೀನಿಷ್ಟು ಕಠೋರಿಯೇ? ಹಾಗಂತ ಅಲ್ಲಿ ನೆರೆದ ಪ್ರತಿಯೋರ್ವರ ಗಂಟಲಿನಲ್ಲಿ ಸದ್ದಿಲ್ಲದೆ ನಿಟ್ಟುಸಿರೊಂದು ಹೊರಹೊಮ್ಮಿತ್ತು. ಕಣ್ಣಂಚಿನಲ್ಲಿ ಇನ್ನಿಲ್ಲದ ದು:ಖವೊಂದು ಮಡುಗಟ್ಟಿ ನಿಂತಿತ್ತು. ಅಯ್ಯೋ.. ದೇವರೇ ನನ್ನನ್ಯಾಕೆ ಉಳಿಸಿಹೋದೆ ಅದೆಂಥಾ ಪಾಪಕ್ಕೆ ನನಗೇ ಈ ಶಿಕ್ಷೆ ನನ್ನನ್ನೂ ಸಹಾ ಕರೆದು ಕೊ. ಅಂತಾ ಆ ಹೆತ್ತೊಡಲು ಮರುಗುತ್ತಿದ್ದರೇ, ಓಹ್ ಬದುಕೇ ನಿನ್ಯಾಕೆ ಆ ಕುಟುಂಬದ ಪಾಲಿಗೆ ಇಷ್ಟೊಂದು ನಿಷ್ಕರುಣಿಯಾಗಿ ಹೋದೆ. ಎನ್ನುವ ಪ್ರಶ್ನೆ ಅಲ್ಲಿ ಮತ್ತೇ ಮತ್ತೇ ಮಗ್ಗಲು ಬದಲಿಸುತ್ತಿತ್ತು. ಆ ಮನೆಯ ಸಮೀಪದ ತೋಟದ ಕೆರೆಯೊಂದರ ದಂಡೆಯ ಮೇಲೆ ಇಬ್ಬರು ಪುಟ್ಟ ಗಂಡು ಮಕ್ಕಳ ಸಹಿತ ತಂದೆಯೋರ್ವನ ಶವಗಳು ಉದ್ದಕ್ಕೂ ಮೈಚೆಲ್ಲಿದ್ದುದು ಈ ಎಲ್ಲಾ ಸನ್ನಿವೇಶಗಳಿಗೆ ಕಾರಣವಾಗಿತ್ತು. ಕುಂದಾಪ್ರ ಡಾಟ್ ಕಾಂ ವರದಿ.
ಆಗಿದ್ದೇನು?
ರಾಘವೇಂದ್ರ ಕಿಣಿ(38)ಅವರ ಮಕ್ಕಳಾದ ಪ್ರಕಾಶ ಕಿಣಿ(14) ಯೋಗಿಶ್ ಕಿಣಿ(13)ಎಂಬ ದುರ್ದೈವಿಗಳ ಮೇಲೆ ಹೊತ್ತಲ್ಲದ ಹೊತ್ತಿನಲ್ಲಿ ಎರಗಿದ ಸಾವು ಇನ್ನಿಲ್ಲದಂತೆ ಅವರನ್ನು ಕಬಳಸಿ ಬಿಟ್ಟಿದೆ. ಉಳ್ಳೂರು ೧೪ರ ಐರಬೈಲು ಈ ದುರಂತಕ್ಕೆ ಸಾಕ್ಷಿಯಾಗಿದ್ದು ಸಮಾರಂಭಗಳಲ್ಲಿ, ಪಕ್ಕದ ಹೊನ್ನಮ್ಮ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ರಾಘವೇಂದ್ರ ಕಿಣಿ ತನ್ನ ಪತ್ನಿ ಜ್ಯೋತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಅತ್ತೆ ಮಾವರಿಬ್ಬರಿಗೂ ವಯೋ ಸಹಜ ಅನಾರೋಗ್ಯ ಕಾಡುತ್ತಲಿರುವುದರಿಂದ ಆ ಮನೆಗೆ ಇವರೆ ದಿಕ್ಕಾಗಿದ್ದರು. ಪ್ರಕಾಶ ಪಾಸಾಗಿ ಎಂಟನೆ ತರಗತಿಗೆ ಹೋಗುವ ಸಂಭ್ರಮದಲ್ಲಿದ್ದರೆ, ಯೋಗಿಶನಿಗೆ 6 ನೇ ತರಗತಿಯಲ್ಲಿ ತೇರ್ಗಡೆಯಾದ ಸಂತಸ. ಕೇಳಿ ಬಂದ ಹಾಗೆ ಮಕ್ಕಳಿಬ್ಬರಿಗೂ ತುಸು ಅಸ್ತಮಾದ ಸಮಸ್ಯೆ ಇದ್ದು ಆಗಾಗ್ಗೆ ಮಣಿಪಾಲಕ್ಕೆ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದರು. ಅದು ಬಿಟ್ಟರೆ ಬಡತನವಿದ್ದರೂ ತಂಬು ಸಂತಸದ ಸಂಸಾರ ಅದು. /ಕುಂದಾಪ್ರ ಡಾಟ್ ಕಾಂ/ ಆದರೆ ಕಾಲನಿಗ್ಯಾಕೋ ಆ ಮನೆಯ ಮೇಲೆ ಕ್ರೂರ ದೃಷ್ಟಿ ವಕ್ಕರಿಸಿತೋ ನಿನ್ನೆ ಬೆಳಗ್ಗೆ ಮನೆಯಂಗಳದಲ್ಲಿ ಕಟ್ಟಿದ ಜೋಕಾಲಿಯಲ್ಲಿ ಮನ ದಣಿಯುವಂತೆ ಆಟವಾಡಿದ ಸಹೋದರರಿಬ್ಬರು ಸಹಪಾಠಿ ಶಮಂತಕನೊಂದಿಗೆ ಕೊಳೆಯಾದ ಬಟ್ಟೆಗಳನ್ನು ಹಿಡಿದು ಮನೆಯ ಅನತಿ ದೂರದಲ್ಲಿರುವ ಪಕ್ಕದ ತೋಟದ ಕೆರೆಯಲ್ಲಿ ತೊಳೆಯಲು ಹೊರಟಿದ್ದಾರೆ. ಕೆರೆಯಲ್ಲಿ ತೇಲುತ್ತಿದ್ದ ಬೊಂಬಿನ ಮೇಲೆ ಕಾಲನ್ನು ಇರಿಸಿದ ಯೋಗೆಶ್ ಜಾರಿ ಕೆಳಗೆ ಬೀಳುತ್ತಲೇ ಅವನನ್ನು ಹಿಡಿಯಲು ಪ್ರಕಾಶ ಮುಂದಾಗಿದ್ದಾನೆ. ಅವನೂ ಸಹಾ ಜಾರಿದಾಗ ಅಲ್ಲಿಯೇ ಇದ್ದ ಮರದ ಬೀಳಲೊಂದರಿಂದ ಅವರನ್ನು ರಕ್ಷಿಸಲು ಯತ್ನಿಸಿದ ಶಮಂತಕ ಅದು ಸಾಧ್ಯವಾಗದಿದ್ದಾಗ ಕೂಗುತ್ತಾ ಮನೆಮ ಕಡೆ ಬಂದಿದ್ದಾನೆ. ಅದೇ ಸಮಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕಿಣಿ ಏನೆಂದು ವಿಚಾರಿಸಿದಾಗ ಶಮಂತಕ ನಡೆದ ಘಟನೆ ಹೇಳಿದ್ದಾನೆ. ವಿಷಯ ತಿಳಿದವರೇ ರಾಘುವೇಂದ್ರ ಅವರು ಒಂದೇ ಓಟಕ್ಕೆ ಕೆರೆ ಬಳಿ ಓಡಿ ಆದರೆ ಮಕ್ಕಳಿಬ್ಬರೂ ಕಾಣದಿದ್ದಾಗ ಅವರನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ತಂದೆ, ಮಕ್ಕಳನ್ನು ರಕ್ಷಿಸಲು ಕೆರೆಗಿಳಿದವರು ಮೇಲೇಳಲೇ ಇಲ್ಲ. ಸಾವು ರಾಘವೇಂದ್ರ ಅವರ ಅಂತ್ಯಕ್ಕೆ ಸಹಿ ಜಡಿದರೆ, ಅತ್ತ ಕೆರೆಯ ಕೆಸರಿನಲ್ಲಿ ಹೂತು ಹೋಗಿದ್ದ ಅಣ್ಣತಮ್ಮಂದಿರಿಬ್ಬರೂ ತಮ್ಮ ಕೊನೆಯ ಉಸಿರನ್ನು ಅದಾಗಲೇ ಜತೆಯಾಗಿಯೇ ಚೆಲ್ಲಿ ಬಿಟ್ಟಿದ್ದಾರೆ. ಸಾವೆಂಬ ಸಾವು ಮಾತ್ರ ಯಾವುದೇ ಆತಂಕವಿಲ್ಲದೆ ಅಲ್ಲಿಂದ ತನ್ನ ಮುಂದಿನ ಬೇಟೆಯನ್ನರಸಿ ಅನಾಯಾಸವಾಗಿ ಸಾಗಿ ಹೋಗಿದೆ ಆದರೆ ತಬ್ಬಲಿಯಾಗಿರುವ ಆ ಮನೆಯಂಗಳದಿಂದ ಏದ್ದೆದ್ದು ಬರುವ ಅಕ್ರಂದನಕ್ಕೆ ಅಂತ್ಯವೆಲ್ಲಿ..? ಕಣ್ಣೀರಾಗಿ ಹೋಗಿದೆ ಐರಬೈಲು. /ಕುಂದಾಪ್ರ ಡಾಟ್ ಕಾಂ ವರದಿ./
ಮೊದಲ ವರದಿ ► ಕೆರೆಯಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳ ದುರ್ಮರಣ – http://kundapraa.com/?p=13995 .