ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವರುಣನ ಅಬ್ಬರಕ್ಕೆ ಕುಂದಾಪುರ ತಾಲೂಕಿನಲ್ಲಿ ಎರಡು ಸಾವು ಸಂಭವಿಸಿದೆ. ಉಳ್ತೂರು ಮಲ್ಯಾಡಿಯಲ್ಲಿ ದಿನಕರ ಶೆಟ್ಟಿ [53] ಎಂಬುವವರು ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ಮೃತಪಟ್ಟರೆ, ಯಡಮೊಗೆಯಲ್ಲಿ ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಅರ್ಚಕ ಶೇಷಾದ್ರಿ ಐತಾಳ್ (71) ಎಂಬುವವರು ದಾರುಣವಾಗಿ ಮೃತಪಟ್ಟಿದ್ದಾರೆ.
ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದ ತೊಪ್ಲು ನಿವಾಸಿ, ಕಮಲಶಿಲೆ ದೇಗುಲದ ಅರ್ಚಕ ಶೇಷಾದ್ರಿ ಐತಾಳ್ ಅವರು ಕುಬ್ಜಾ ನದಿಯ ಮಗ್ಗಲಲ್ಲಿ ಇರುವ ಅವರ ತೋಟಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಅವರು ಮಂಗಳವಾರ ಸಂಜೆ ತೋಟಕ್ಕೆ ನಿರ್ಮಿಸಿಕೊಳ್ಳಲಾಗಿದ್ದ ತಾತ್ಕಾಲಿಕ ಮರದ ಕಾಲುಸಂಕದಿಂದ ನದಿಗೆ ಜಾರಿ ಬಿದ್ದು ಬಿದ್ದಿದ್ದಾರೆ. ಬುಧವಾರ ಮುಳುಗುತಜ್ಞರ ಸಹಾಯದಿಂದ ಶೋಧಕಾರ್ಯ ನಡೆಸಿದ್ದು, ಸುಮಾರು 8 ಅಡಿ ಅಳದ ಹರಿಯುವ ನೀರಿನ ಮುಂಡ್ಕನ ಓಲೆಯ ಪೊದೆಯ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
► ಮಲ್ಯಾಡಿ: ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ವ್ಯಕ್ತಿ ಸಾವು – https://kundapraa.com/?p=67497 .